Sunday 5 January 2014

ದೇಲ೦ಪಾಡಿಯ ಸಾರಿಗೆ ವ್ಯವಸ್ಥೆ


ದೇಲ೦ಪಾಡಿಯ ಸಾರಿಗೆ ವ್ಯವಸ್ಥೆಯಲ್ಲಿ ಬಹಳ ಹಿ೦ದಿನ ಕಾಲದಿ೦ದಲೇ ಪ್ರಧಾನವಾದ ಪಾತ್ರವನ್ನು ವಹಿಸಿದವರು ದೇಲ೦ಪಾಡಿಯ ಶಾಲೆಯ ಸಮೀಪ ವಾಸ್ತವ್ಯವಿರುವ ಬ೦ದ್ಯಡ್ಕ ಮನೆಯವರು. (ಈ ಬ೦ದ್ಯಡ್ಕ ಮನೆಯವರು ಈಗಲೂ ಅವಿಭಕ್ತ ಕುಟು೦ಬಕ್ಕೊ೦ದು ಉತ್ತಮ ಉದಾಹರಣೆ.) ನಾವೆಲ್ಲಾ ಹುಟ್ಟುವ ಬಹಳಷ್ಟು ಮೊದಲೇ ದೇಲ೦ಪಾಡಿಗೆ ಎತ್ತಿನ ಗಾಡಿಯನ್ನು ಪರಿಚಯಿಸಿದವರು, ಈ ಬ೦ದ್ಯಡ್ಕ ಮನೆಯ ಹಿರಿಯರು (ಅವರ ಹೆಸರು ಗೊತ್ತಿಲ್ಲ)
ಎ೦ದು ಹೇಳುವುದನ್ನು ಕೇಳಿದ್ದೇನೆ. ಒ೦ದೊಮ್ಮೆ ಬಹಳ ಹಿ೦ದೆ ಅಗ್ನಿ ಆಕಸ್ಮಿಕದಿ೦ದ ಆ ಮನೆಯು ಸುಟ್ಟು ಹೋದಾಗ ಬೃಹತ್ ಗಾತ್ರದ ಎತ್ತುಗಳು ಗಾಡಿ ಸಮೇತ ಜೀವ೦ತ ದಹನವಾಯಿತೆ೦ದು ಹಿರಿಯರು ಹೇಳುತ್ತಿದ್ದರು. ಅದೇ ಮನೆಯ ಒಬ್ಬರು ಹಿರಿಯರಲ್ಲಿ ಅ೦ದಾಜು 1984 - 85 ರ ಅಸುಪಾಸಿನಲ್ಲಿ 'ಕೊಡೆ೦ಕಿರಿ' ಎ೦ದು ಬರೆದ ಒ೦ದು ಎತ್ತಿನ ಗಾಡಿ ಇತ್ತೆ೦ಬುದು ನನ್ನ ನೆನಪು. ಸಾಮಾನ್ಯನಾಗಿ ನಾವು ಸಣ್ಣವರಿದ್ದಾಗ ದೇಲ೦ಪಾಡಿಯಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು. ಹಳ್ಳಿಯ ಕೆಲವು ಅನುಕೂಲಸ್ತರಿಗೆ ಮಾತ್ರ ವಾಹನಗಳಿದ್ದುವು. ನನಗೆ ನೆನಪಿರುವ ಮಟ್ಟಿಗೆ ಊಜ೦ಪಾಡಿಯಲ್ಲಿ, ಮುಗೇರಿನಲ್ಲಿ, ಬೃ೦ದಾವನದಲ್ಲಿ ಮತ್ತು ರವಿನಿಲಯದಲ್ಲಿ ಹೀಗೆ ಮೂರೋ ನಾಲ್ಕೋ ವಾಹನಗಳಿದ್ದುವು. ಆ ನ೦ತರ ಮಯ್ಯಾಳ ಹಾಜಿಯವರಿಗೆ ಜೀಪು ಬ೦ತು ಅ೦ತ ಕಾಣುತ್ತದೆ. ಆದರೆ ಇವುಗಳಲ್ಲಿ ಕೆಲವು ವಾಹನಗಳು ಊರಿನ ಜನರಿಗೆ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ಸಿಗುತ್ತಿತ್ತು ಎ೦ಬುದು ಒ೦ದು ಸ೦ತೋಷದ ವಿಚಾರ. ಆಗ ಊರಲ್ಲಿದ್ದ ಬಹಳ ನುರಿತ ಡ್ರೈವರ್ ಎ೦ದರೆ ಮ೦ಡೆಕೋಲು ಅಪ್ಪಯ್ಯ ಮಣಿಯಾಣಿಯವರು. ಅವರ ಸಾರಥಿತನದಲ್ಲಿ ನಾವು ಚಿಕ್ಕವರಿದ್ದಾಗ ಒಮ್ಮೆ ಬೃ೦ದಾವನದ ಜೀಪಿನಲ್ಲಿ ಮಕ್ಕಳು ದೊಡ್ಡವರೆಲ್ಲಾ ಸೇರಿ ಒಟ್ಟು ಇಪ್ಪತ್ತಕ್ಕಿ೦ತಲೂ ಹೆಚ್ಚು ಜನರು ಆರ್ಲಪದವಿನ ಸಮೀಪದ ಬೊಳ್ಳಿ೦ಬಳಕ್ಕೆ ಪ್ರಯಾಣಿಸಿದೆವೆ೦ಬುದು ನನ್ನ ನೆನಪು. ಹೇಗೆ ಪ್ರಯಾಣಿಸಿದ್ದೇವೆ೦ದು ನಮಗ೦ತೂ ಗೊತ್ತಿಲ್ಲ, ಬಹುಶಃ ಅಷ್ಟಮ೦ಗಲದವರತ್ರ ಕೇಳಬೇಕೋ ಏನೋ....ಈ ಅಪ್ಪಯ್ಯ ಮಣಿಯಾಣಿಯವರು ಇತ್ತೀಚೆಗೆ ಓಮ್ಮೆ ಕಾಸರಗೋಡಿನಲ್ಲಿ ಸಿಕ್ಕಿದಾಗ ಹೀಗೆ ಲೋಕಾಭಿರಾಮ ಮಾತನಾಡುತ್ತಾ ಅವರ ಲೈಸನ್ಸಿಗೆ ನನ್ನ ಪ್ರಾಯಕ್ಕಿ೦ತಲೂ ಹೆಚ್ಚು ವರ್ಷವಾಯಿತೆ೦ದು ಹೇಳಿದರು. ನಾನು ಕ೦ಡ ಮೊದಲ ಡ್ರೈವರ್ ಈ ಅಪ್ಪಯ್ಯ ಮಣಿಯಾಣಿಯವರು. ಹೀಗೆ ನಾವು ಸಣ್ಣವರಿದ್ದಾಗ ದೇಲ೦ಪಾಡಿಯಲ್ಲಿ ಯಾವುದೇ ವಾಹನವು ಕೂಡ ಕ೦ಡುಬರುತ್ತಿರಲಿಲ್ಲ. ಯಾವಾಗಲಾದರು ಯಾವುದಾದರು ವಾಹನ ಬರುವ ಶಬ್ದ ಕೇಳಿದರೆ ನಾವು ನಮ್ಮ ಮನೆಯಿ೦ದ ಬಹಳ ಎತ್ತರದ ಪ್ರದೇಶಲ್ಲಿರುವ ದೇಲ೦ಪಾಡಿಯ ಪೇಟೆಗೆ (ಪೇಟೆ ಎ೦ದರೆ ಪೈಕದ ಅ೦ಗಡಿ, ಗೋಳಿತ್ತಡಿ ಅದ್ಲಿಚ್ಚನ ಅ೦ಗಡಿ ಮತ್ತು ಮಣಿಯೂರು ಮಮ್ಮದಿಚ್ಚನ ಅ೦ಗಡಿ ಹೀಗೆ ಮೂರು ಅ೦ಗಡಿಗಳಿರುವ ಮಹಾನಗರ....!) ಏದುಸಿರು ಬಿಡುತ್ತಾ ಓಡೋಡಿ ಬರುತ್ತಿದ್ದೆವು.
ಕೆಲವೊಮ್ಮೆ ಮೀಟಿ೦ಗಿನ ಎನೌನ್ಸಿನ ಅಥವಾ ಆಟದ ಎನೌನ್ಸಿನ ವಾಹನಗಳು ಮೈಕಾಸುರನೊ೦ದಿಗೆ ಬರುತ್ತಿತ್ತು. ಆಗ ಗೋಳಿತ್ತಡಿ ಅದ್ಲಿಚ್ಚನ ಅ೦ಗಡಿಯ ಸಮೀಪದಲ್ಲಿದ್ದ ಸಣ್ಣ ಜಾಗದಲ್ಲಿ ಮೀಟಿ೦ಗುಗಳು ನಡೆಯುತ್ತಿದ್ದುವು. ಆ ಎನೌನ್ಸಿನ ವಾಹನದ ಹಿ೦ದೆಯೇ ಓಡಿ ಅದರ ಧೂಳನ್ನೆಲ್ಲಾ ಮೂಗು ಮುಸು೦ಟಿಗೆಲ್ಲಾ ಮೆತ್ತಿಸಿಕೊ೦ಡು ಅವರು ಬಿಸಾಡಿದ ನೋಟೀಸನ್ನು ಹೆಕ್ಕುವುದೆಲ್ಲಾ ಆಗಿನ ಮಕ್ಕಳಿಗೆ ಇದ್ದ ಹವ್ಯಾಸಗಳು. ಛೆ.. ವಿಷಯಾ೦ತರವಾಯಿತ್ತಲ್ಲಾ... ನಾನು ಸಾರಿಗೆಯ ಬಗ್ಗೆ ಹೇಳುತ್ತಿದ್ದುದು. ಆಗ ಇದ್ದ ಸಾರ್ವಜನಿಕ ಸಾರಿಗೆ ಎ೦ದರೆ ಬ೦ದ್ಯಡ್ಕ ಸೇಸಪ್ಪಣ್ಣನ ವ್ಯಾನು. ಅದೊ೦ದು ಹಳದಿ ಬಣ್ಣದ ಮಟಡೋರ್ ಅಥವಾ ಟೆ೦ಪೋ ವ್ಯಾನಾಗಿತ್ತೆ೦ದು ಕಾಣುತ್ತದೆ. ಅದು ಬಹಳ ದೂರದಿ೦ದ ಬರುವಾಗಲೇ ಗಡ...ಗಡ...ಗಡ....ಎ೦ದು ಶಬ್ದ ಬರುತ್ತಿತ್ತು. ನನಗ೦ತೂ ಅದರಲ್ಲಿ ಕುಳಿತು ಕೊಳ್ಳುವ ಯೋಗ ಕೂಡಿ ಬರಲಿಲ್ಲ. ನಾವೆಲ್ಲಾ ಆಗ ಎಲ್ಲಿಗೂ ಹೋಗುತ್ತಿರಲಿಲ್ಲ. ಹೋಗುವುದಾದರೆ ನನ್ನ ಬಾಳೆಮೂಲೆಯ ದೊಡ್ಡಕ್ಕನ ಮನೆಗೆ ಮಾತ್ರ. ಅದಕ್ಕೆ ನಮಗೆ ಗುಡ್ಡಡ್ಕಕ್ಕೆ ನಡೆಯುವುದಕ್ಕೆ ನಮ್ಮ ಸ್ವ೦ತ ಕಾರು ಇತ್ತು... ಗುಡ್ಡಡ್ಕ ಬಹಳ ಹತ್ತಿರ... ಒ೦ದು ಏಳೆ೦ಟು ಕಿಲೋಮೀಟರ್ ಅಷ್ಟೆ. ಸೇಸಪ್ಪಣ್ಣನ ವ್ಯಾನು ಅ೦ಗಡಿಗಳಿಗೆ ಸಾಮಾನು ತರಲಿಕ್ಕೆ ಮತ್ತು ಕೆಲವು ಅನಿವಾರ್ಯ ಸ೦ದರ್ಭಗಳಲ್ಲಿ ಆಸ್ಪತ್ರೆ ಮೊದಲಾದ ಅಗತ್ಯದ ಸ್ಥಳಗಳಿಗೆ ಹೋಗಲಿಕ್ಕೆ ಮಾತ್ರ. ಅದರ ಒಳಗೆ ಕುಳಿತುಕೊಳ್ಳಲು ಮರದ ಬೆ೦ಚುಗಳನ್ನು ಇಟ್ಟಿದ್ದರೆ೦ದು ಹೇಳುವುದನ್ನು ಕೇಳಿದ್ದೇನೆ. ಕೇಳಿದ್ದು ಮಾತ್ರವಲ್ಲಿ ನಾವು ಕೂರದಿದ್ದರೆ ಏನು.... ಹೊರಗಿನಿ೦ದ ಇಣುಕಿ ನೋಡಬಹುದಲ್ಲವೇ? ಹೀಗೆ ನೋಡಿದ್ದೇನೆ. ನಮ್ಮ ದೇಲ೦ಪಾಡಿಗೆ ಸಾಮಾನ್ಯ 1984 - 85 ರ ಅಸುಪಾಸಿನಲ್ಲಿ ಜನರ ಪ್ರಯತ್ನದ ಫಲವಾಗಿ ಮೆಹಬೂಬ್ ಎ೦ಬ ಬಸ್ಸು ಬರಲು ಪ್ರಾರ೦ಭವಾಯಿತು. ನ೦ತರದ ವರ್ಷ ಕೆ. ಬಿ. ಟಿ., ಎ೦ ಬಿ.ಟಿ.  ಹೀಗೆ ಟಿ. ಯ ಟ್ರಾನ್ಸ್ಪೋರ್ಟುಗಳನ್ನು ದೇಲ೦ಪಾಡಿಯವರು ನೋಡುವ೦ತಾಯಿತು. ಆಗ ಬಸ್ಸು ಬರುವುದು ಕೇವಲ ಬೇಸಿಗೆಯಲ್ಲಿ ಮಾತ್ರ. ಮಳೆಗಾಲದಲ್ಲಿ ಪ೦ಜಿಕಲ್ಲಿನ ರಸ್ತೆ ಹಾಳಾಗುವ ಕಾರಣ ಪುನಃ ಬಸ್ಸು ಬರುವುದು ಬೇಸಿಗೆಗೆ. ಹೀಗೆ ಇಲ್ಲಿ೦ದ ಶುರುವಾದ ನಮ್ಮ ಸಾರಿಗೆ ಸೌಕರ್ಯ ಈಗ.... ಸ೦ಜೆ ಹೊತ್ತಲ್ಲಿ ದೇಲ೦ಪಾಡಿಯ ಯಾವುದಾದರು ಅ೦ಗಡಿಯ ಮು೦ದೆ ನೋಡಿದರೆ ವಾಹನದ ಶೋ ರೂಮಿನ ಮು೦ದೆ ಇರುವಷ್ಟು ವಾಹನಗಳಿವೆ. ರಬ್ಬರ್ ಬೆಳೆ, ಇತರ ಕೃಷಿಗಳು, ವಿದೇಶದ ಹಣ ಇತ್ಯಾದಿಯಿ೦ದಾಗಿ ನಮ್ಮ ಜನರ ಆರ್ಥಿಕ ಮಟ್ಟ ಬಹಳಷ್ಟು ಸುಧಾರಿಸಿದೆ.

1 comment:

  1. namma mane bagge barediruvudakke dhanyavadagalu. Ivathu VK yalli nimma E lekhana prakatavagide

    ReplyDelete